ಸದ್ಯಕ್ಕೆ ಕೃಷಿಗೆ ನೀರು ಬಿಡಲ್ಲ: ರೈತರಿಗೆ ಬಿಗ್ ಶಾಕ್ ಕೊಟ್ಟ ಸರ್ಕಾರ...! ಕೃಷಿ ಸಚಿವ ಚಲುವರಾಯಸ್ವಾಮಿಯವರು ಕೃಷ್ಣರಾಜಸಾಗರ ಜಲಾಶಯದ ನೀರಾವರಿ ಸಲಹಾ ಸಮಿತಿಯೊಂದಿಗೆ ಶನಿವಾರ ಸಭೆ ನಡೆಸಿದರು. ಬೆಂಗಳೂರು: ಕೃಷಿಗೆ ಸದ್ಯಕ್ಕೆ ನೀರು ಹರಿಸುವುದಿಲ್ಲ ಎಂದು ರಾಜ್ಯ ಸರ್ಕಾರ ಹೇಳಿದ್ದು, ಸರ್ಕಾರದ ಈ ನಡೆ ರೈತರು ತಬ್ಬಿಬ್ಬಾಗುವಂತೆ ಮಾಡಿದೆ.ನಿನ್ನೆಯಷ್ಟೇ ಕೃಷಿ ಸಚಿವ ಚಲುವರಾಯಸ್ವಾಮಿಯವರು ಕೃಷ್ಣರಾಜಸಾಗರ ಜಲಾಶಯದ ನೀರಾವರಿ ಸಲಹಾ ಸಮಿತಿಯೊಂದಿಗೆ ಸಭೆ ನಡೆಸಿದರು.ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವರು, ಕಳೆದ 15 ದಿನದಿಂದ ಕೆಆರ್‌ಎಸ್‌ನಿಂದ () ವಿಸಿ ನಾಲೆಗೆ ನೀರು ಬಿಡಬೇಕು ಎಂಬ ಒತ್ತಡ ಇತ್ತು. ಈಗ ಅಲ್ಲಿ ನೀರು ಹೆಚ್ಚಾಗಿದೆ. ಮಾರ್ಚ್, ಏಪ್ರಿಲ್, ಮೇನಲ್ಲಿ ನೀರು ಬಿಡದಿರೋದ್ರಿಂದ ಜಾನುವಾರು ಹಾಗೂ ಪಕ್ಷಿಗಳಿಗೆ ಸಮಸ್ಯೆ ಆಗಿತ್ತು. ಹೀಗಾಗಿ ನೀರು ಬಿಡಬೇಕು ಎಂದು ಒತ್ತಾಯ ಬಂದಿತ್ತು. ಜುಲೈ 8 ರ ಸಂಜೆಯಿಂದ ವಿಸಿ ನಾಲೆಗೆ 15 ದಿನ ನೀರು ಬಿಡಲಾಗುತ್ತದೆ ಎಂದು ಹೇಳಿದರು.ನೀರು ಬಿಡಬೇಕು ಎಂದು ಅಲ್ಲಿನ ಶಾಸಕರು ಒತ್ತಾಯ ಮಾಡಿದ್ದರು. ಕುಡಿಯುವ ನೀರು ಹಾಗೂ ಜಾನುವಾರುಗಳಿಗಾಗಿ ಮಾತ್ರ ನೀರು ಬಿಡುತ್ತೇವೆ. ಕೃಷಿಗೆ ಸದ್ಯಕ್ಕೆ ನೀರು ಹರಿಸೋದಿಲ್ಲ. ಸದ್ಯಕ್ಕೆ ಅಂದುಕೊಂಡಷ್ಟು ಮಳೆಯಾಗಿಲ್ಲ. ಜುಲೈ ಅಂತ್ಯಕ್ಕೆ ಪೂರ್ಣ ಪ್ರಮಾಣದ ಕ್ಲಾರಿಟಿ ಸಿಗುತ್ತೆ. ನಿತ್ಯ 3,000 ಕ್ಯೂಸೆಕ್ ನೀರು ಬಿಡುವ ಚಿಂತನೆ ಇದೆ ಎಂದರು.